IPL 2025: ಕನ್ನಡಿಗ ಮನೀಶ್ ಪಾಂಡೆಗೆ ಅನ್ಯಾಯ ಮಾಡಿತೇ ಬಿಸಿಸಿಐ?
Manish Pandey: ಪಾಂಡೆ ಈ ಬಾರಿಯ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಆಟಗಾರನಾಗಿದ್ದಾರೆ. ಒಂದು ಪಂದ್ಯವನ್ನು ಕೂಡ ಆಡಿದ್ದಾರೆ. ಆದರೆ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗಿದ್ದರು. ಕೆಕೆಆರ್ಗೆ ಇನ್ನೂ ಹಲವು ಪಂದ್ಯ ಬಾಕಿ ಇರುವ ಕಾರಣ ಮುಂದಿನ ಪಂದ್ಯದಲ್ಲಿ ಬಿಸಿಸಿಐ ಮನೀಶ್ ಪಾಂಡೆಯನ್ನು ಗೌರವಿಸಬಹುದು ಎಂಬ ನಂಬಿಕೆ ಅಭಿಮಾನಿಗಳದ್ದಾಗಿದೆ.


ಬೆಂಗಳೂರು: ವಿಶ್ವದ ಕ್ಯಾಶ್ ರಿಚ್ ಐಪಿಎಲ್(IPL 2025) ಕ್ರಿಕೆಟ್ ಟೂರ್ನಿ ಐಪಿಎಲ್ 18ನೇ ವರ್ಷಕ್ಕೆ ಕಾಲಿಟ್ಟಿದೆ. 2008ರ ಏಪ್ರಿಲ್ 18 ರಂದು ಬೆಂಗಳೂರಿನಲ್ಲಿ ನಡೆದಿದ್ದ ಉದ್ಘಾಟನ ಆವತ್ತಿಯ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಿತ್ತು. ಈ ಪಂದ್ಯ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿತ್ತು. 18ನೇ ವರ್ಷಕ್ಕೆ ಕಾಲಿಟ್ಟ ಪಂದ್ಯ ಕೂಡ ಬೆಂಗಳೂರಿನಲ್ಲೇ ನಡೆದದ್ದು ವಿಶೇಷ. ವಿಪರ್ಯಾಸವೆಂದರೆ ಎರಡೂ ಪಂದ್ಯಗಳಲ್ಲಿ ಆರ್ಸಿಬಿ ಸೋಲು ಕಂಡಿದ್ದು.
ಮೊದಲ ಆವೃತ್ತಿಯಿಂದ ಐಪಿಎಲ್ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಿಗೆ ಬಿಸಿಸಿಐ ಪಂದ್ಯದ ವೇಳೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದೆ. ಆದರೆ ಕನ್ನಡಿಗ ಮನೀಶ್ ಪಾಂಡೆ(Manish Pandey)ಗೆ ಮಾತ್ರ ಬಿಸಿಸಿಐ ಈ ಗೌರವ ನೀಡಿಲ್ಲ. ಇದು ಕನ್ನಡಿಗ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಮನೀಶ್ ಪಾಂಡೆ ಕೂಡ 2008ರ ಚೊಚ್ಚಲ ಆವೃತ್ತಿಯಿಂದ ಇದುವರೆಗೂ ಐಪಿಎಲ್ ಆಡುತ್ತಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಹಾಗೂ ಈ ಸಾಧನೆಗೈದ ಅತಿ ಕಿರಿಯ ಆಟಗಾರ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ. ಅಂದು ಅವರು ಶತಕ ಬಾರಿಸುವಾಗ ಕೇವಲ 19 ವರ್ಷ ವಯಸ್ಸಾಗಿತ್ತು. ಕೊಹ್ಲಿ, ರೋಹಿತ್ ಐಪಿಎಲ್ನಲ್ಲಿ ಮಿಂಚುವ ಮುನ್ನವೇ ಪಾಂಡೆ ಖ್ಯಾತಿ ಗಳಿಸಿದ್ದರು. ಹೀಗಿದ್ದರೂ ಇನ್ನೂ ಬಿಸಿಸಿಐ ಇವರನ್ನು ಗೌರವಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ IPL 2025: ಆರ್ಸಿಬಿ ತವರಿನ ಸತತ ಸೋಲಿಗೆ ಕಾರಣವೇನು?
ಪಾಂಡೆ ಈ ಬಾರಿಯ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಆಟಗಾರನಾಗಿದ್ದಾರೆ. ಒಂದು ಪಂದ್ಯವನ್ನು ಕೂಡ ಆಡಿದ್ದಾರೆ. ಆದರೆ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗಿದ್ದರು. 19 ರನ್ ಮಾತ್ರ ಗಳಿಸಿದ್ದರು. ಕೆಕೆಆರ್ಗೆ ಇನ್ನೂ ಹಲವು ಪಂದ್ಯ ಬಾಕಿ ಇರುವ ಕಾರಣ ಮುಂದಿನ ಪಂದ್ಯದಲ್ಲಿ ಬಿಸಿಸಿಐ ಮನೀಶ್ ಪಾಂಡೆಯನ್ನು ಗೌರವಿಸಬಹುದು ಎಂಬ ನಂಬಿಕೆ ಅಭಿಮಾನಿಗಳದ್ದಾಗಿದೆ.
ಮನೀಶ್ ಪಾಂಡೆ ಇದುವರೆಗೆ ಐಪಿಎಲ್ನಲ್ಲಿ 172 ಪಂದ್ಯಗಳನ್ನಾಡಿ 3869 ರನ್ ಬಾರಿಸಿದ್ದಾರೆ. ಇದರಲ್ಲಿ 22 ಅರ್ಧಶತಕ ಮತ್ತು ಒಂದು ಶತಕ ಒಳಗೊಂಡಿದೆ. 114 ಗರಿಷ್ಠ ವೈಯಕ್ತಿಕ ಗಳಿಕೆಯಾಗಿದೆ.