ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hubballi Encounter: ಬಾಲಕಿಯ ಕೊಲೆಗಾರನ ಎನ್‌ಕೌಂಟರ್:‌ ದೇಹದ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಆದೇಶ

ಕರ್ನಾಟಕದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್), ಆರೋಪಿಯ ದೇಹದ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

ಹುಬ್ಬಳ್ಳಿ ಬಾಲಕಿ ಕೊಲೆಗಾರನ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಆದೇಶ

ಹರೀಶ್‌ ಕೇರ ಹರೀಶ್‌ ಕೇರ Apr 16, 2025 7:46 AM

ಬೆಂಗಳೂರು: ಹುಬ್ಬಳ್ಳಿಯಲ್ಲಿ (Hubballi News) ಐದು ವರ್ಷದ ಬಾಲಕಿಯ ಹತ್ಯೆಗೈದು, ಪೊಲೀಸರ ಕೈಯಲ್ಲಿ ಹತನಾದ (Hubballi Encounter) ಬಿಹಾರದ ವಲಸೆ ಕಾರ್ಮಿಕನ ದೇಹದ ಮರಣೋತ್ತರ ಪರೀಕ್ಷೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ (Karnataka High Court) ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈತ ಐದು ವರ್ಷದ ಬಾಲಕಿಯ ಅತ್ಯಾಚಾರಗೈದು ಹತ್ಯೆ (murder case) ಮಾಡಿ ಕೇರಳಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಏಪ್ರಿಲ್ 13ರಂದು ಹುಬ್ಬಳ್ಳಿಯಲ್ಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಗುಂಡಿಗೆ ಈತ ಬಲಿಯಾಗಿದ್ದ.

ಬಿಹಾರದ ಕೂಲಿ ಕಾರ್ಮಿಕ ರಿತೇಶ್ ಕುಮಾರ್ ಹುಬ್ಬಳ್ಳಿಯಲ್ಲಿ ನಡೆದ ಅತ್ಯಾಚಾರ- ಕೊಲೆ ಆರೋಪಿಯಾಗಿದ್ದು, ಈತನ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈತ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆ ಮಾಡಿದಾಗ ಪೊಲೀಸರು ಗುಂಡು ಹಾರಿಸಿದ್ದು, ಆಗ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕರ್ನಾಟಕದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಇದನ್ನು ಪ್ರಶ್ನೆ ಮಾಡಿದ್ದು, ಆತನ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಪೊಲೀಸ್ ಕ್ರಮದಿಂದ ಉಂಟಾಗುವ ಸಾವುಗಳ ಕುರಿತು ಸುಪ್ರೀಂ ಕೋರ್ಟ್‌ನ 2014 ರ ಮಾರ್ಗಸೂಚಿಗಳನ್ನು ಪಾಲಿಸುವ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಪೀಠ ಆದೇಶಿಸಿದೆ. ಮರಣೋತ್ತರ ಪರೀಕ್ಷೆಯನ್ನು ವೀಡಿಯೊಗ್ರಫಿ ಮಾಡಬೇಕು ಮತ್ತು ಮುಂದಿನ ತನಿಖೆಗಳಲ್ಲಿ ಸಂಭಾವ್ಯ ಬಳಕೆಗಾಗಿ ದೇಹದ ಮಾದರಿಗಳನ್ನು ಸಂರಕ್ಷಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಪಿಯುಸಿಎಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಮೃತನ ವಿರುದ್ಧದ ಆರೋಪಗಳ ಸ್ವರೂಪ ಮತ್ತು ಆಪಾದಿತ ಎನ್‌ಕೌಂಟರ್ ಸುತ್ತಲಿನ ಸಂದರ್ಭಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಈ ಹಂತದಲ್ಲಿ ನಾವು ಯಾವುದೇ ಪ್ರತಿಕೂಲ ಹೇಳಿಕೆಗಳನ್ನು ನೀಡುತ್ತಿಲ್ಲ. ಕಡ್ಡಾಯ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನಮ್ಮ ವಿನಂತಿಯಾಗಿದೆ ಎಂದು ಅವರು ನುಡಿದರು.

ದೇಹದ ದಹನದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ದೇಹವನ್ನು ಸಂರಕ್ಷಿಸಲು ಮಧ್ಯಂತರ ಪರಿಹಾರವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಅಪರಾಧ ತನಿಖಾ ಇಲಾಖೆ (ಸಿಐಡಿ) ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಹೇಳಿದರು. ಶವವನ್ನು ಅಂತ್ಯಕ್ರಿಯೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇಂತಹ ಸಂದರ್ಭಗಳಲ್ಲಿ ಶವವನ್ನು ಹೂಳಲಾಗುತ್ತದೆ. ದಹನವಲ್ಲ. ಆದ್ದರಿಂದ ಅಗತ್ಯವಿದ್ದರೆ ದೇಹವನ್ನು ನಂತರ ಹೊರತೆಗೆಯಬಹುದು. ಗುರುತಿಸುವಿಕೆಯ ನಂತರವಷ್ಟೇ ಶವವನ್ನು ಅಂತ್ಯಕ್ರಿಯೆಗಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಅವರು ಹೇಳಿದರು. ಈ ಭರವಸೆಯನ್ನು ಗಮನಿಸಿದ ಪೀಠವು, ಶವಸಂಸ್ಕಾರದ ಬಗ್ಗೆ ಅರ್ಜಿದಾರರ ಕಳವಳ ಆಧಾರರಹಿತವಾಗಿದೆ ಎಂದಿತು. ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಿದ್ದು, ಏಪ್ರಿಲ್ 24ರೊಳಗೆ ಉತ್ತರಿಸಲು ತಿಳಿಸಿದೆ.

ಇದನ್ನೂ ಓದಿ: Hubli Girl Murder: ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ; ಎನ್‌ಕೌಂಟರ್‌ನಲ್ಲಿ ಬಿಹಾರದ ಆರೋಪಿ ಹತ್ಯೆ!