SSLC Result 2025: ತುಮಕೂರಿನ ಚೇತನ ವಿದ್ಯಾಮಂದಿರದ ವಿದ್ಯಾರ್ಥಿ ಆದೀಲ್ ರಾಜ್ಯಕ್ಕೆ ಫಸ್ಟ್
SSLC Result 2025: ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ತುಮಕೂರು ನಗರದ ಸರ್ವೋದಯ ಶಿಕ್ಷಣ ಸಂಸ್ಥೆಯ ಚೇತನ ವಿದ್ಯಾಮಂದಿರದ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯ ಮತ್ತು ಜಿಲ್ಲೆಗೆ ಟಾಪರ್ ಆಗಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ತುಮಕೂರು: ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ (SSLC Result 2025) ಶುಕ್ರವಾರ ಪ್ರಕಟವಾಗಿದ್ದು, ತುಮಕೂರು ನಗರದ ಸರ್ವೋದಯ ಶಿಕ್ಷಣ ಸಂಸ್ಥೆಯ ಚೇತನ ವಿದ್ಯಾಮಂದಿರದ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯ ಮತ್ತು ಜಿಲ್ಲೆಗೆ ಟಾಪರ್ ಆಗಿದ್ದಾರೆ. ತನ್ನ ಯಶಸ್ಸಿನ ಕುರಿತು ಮಾತನಾಡಿದ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್, ಟಾಪರ್ ಆಗಿರುವುದು ಖುಷಿ ತಂದಿದೆ. ಗಣಿತ, ವಿಜ್ಞಾನ ವಿಷಯಗಳು ನನಗೆ ತುಂಬಾ ಇಷ್ಟವಾದವು. ಆದರೆ ನನಗೆ ಸಮಾಜ ವಿಜ್ಞಾನ ಕಷ್ಟವಾಗುತ್ತಿತ್ತು. ಉಪನ್ಯಾಸಕರು ಕಥೆ ರೂಪದಲ್ಲಿ ಹೇಳಿಕೊಡುತ್ತಿದ್ದರು. ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ಇತರ ಚಟುವಟಿಕೆಯನ್ನು ಮಾಡುತ್ತಿದ್ದೆ. ಶಿಕ್ಷಕರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಮೊದಲ ದಿನದಿಂದಲೂ ಪ್ರತಿ ದಿನ 2 ಗಂಟೆ ಓದಿದರೆ ಸಾಕು. ಅರ್ಥ ಮಾಡಿಕೊಂಡು ಓದಬೇಕು. ಮನೆಯಲ್ಲಿ ಓದಿಗೆ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ವೈದ್ಯನಾಗಬೇಕೆಂಬ ಆಸೆಯಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ವಿ. ಸುಬ್ಬರಾವ್ ಮಾತನಾಡಿ, ಸರ್ವೋದಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚೇತನ ವಿದ್ಯಾಮಂದಿರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿರುವುದು ತುಂಬಾ ಸಂತೋಷ ತಂದಿದೆ. ಇದುವರೆಗೂ 2 ಮತ್ತು 3ನೇ ಸ್ಥಾನ ಬರುತ್ತಿತ್ತು. ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೆ ಕಾರಣಕರ್ತರಾದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯಕ್ಕೆ ಟಾಫರ್ ಜತೆಗೆ ಇನ್ನು 4 ರ್ಯಾಂಕ್ ಬಂದಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | SSLC Result 2025: ಎಸ್ಎಸ್ಎಲ್ಸಿ ಫಲಿತಾಂಶ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ನನ್ನು ಚೇತನ ವಿದ್ಯಾಮಂದಿರ ಸಂಸ್ಥೆಯ ಎಸ್. ಸುಬ್ಬರಾಯ, ಕೆ.ವಿ. ಸುಬ್ಬರಾವ್, ಮುಖ್ಯ ಶಿಕ್ಷಕ ಶ್ರೀನಿವಾಸ ಮೂರ್ತಿ ಅವರು ಅಭಿನಂದಿಸಿದರು.