ಸರ್ಕಾರಿ ಶಾಲೆಗಳು ಉಳಿದು ಬೆಳೆಯಬೇಕಾದರೆ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ: ಆರತಿ. ಬಿ ತಹಶೀಲ್ದಾರ್
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮಾರ್ಗದರ್ಶನ ದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ. ಶಾಲೆಯಲ್ಲಿ ನಡೆಯುವ ಪಾಠದ ಜೊತೆಗೆ ಮನೆಯಲ್ಲಿಯೂ ಸಹ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿದಾಗ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಸರಿಸಮಾನವಾಗಿ ಕಲಿಕೆಯಲ್ಲಿ ಮುಂದುವರೆದು ಸಮಾಜದಲ್ಲಿ ಉತ್ತಮ ನಾಗರಿಕ ರಾಗಲು ಸಹಕಾರಿಯಾಗುತ್ತದೆ


ಗುಬ್ಬಿ : ಸರ್ಕಾರಿ ಶಾಲೆಗಳು ಉತ್ತಮವಾಗಿ ಬೆಳೆಯಬೇಕಾದರೆ ಪೋಷಕರು ಮತ್ತು ಶಾಲಾ ಶಿಕ್ಷಕರು ಸಮಾನವಾಗಿ ಸ್ಪಂದಿಸಿದಾಗ ಮಾತ್ರ ಉಳಿಯಲು ಸಾಧ್ಯವಾಗುತ್ತದೆ ಎಂದು ಆರತಿ ಬಿ ತಿಳಿಸಿದರು.
ಪಟ್ಟಣದ ಪಿ ಎಮ್ ಶ್ರೀ ಶಾಲೆಯಲ್ಲಿ ಆಯೋಜಿಸಿದ 2025-26 ನೇ ಸಾಲಿನ ಶಾಲಾ ಪ್ರಾರಂಭೋ ತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮಾರ್ಗದರ್ಶನ ದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ. ಶಾಲೆಯಲ್ಲಿ ನಡೆಯುವ ಪಾಠದ ಜೊತೆಗೆ ಮನೆಯಲ್ಲಿಯೂ ಸಹ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿದಾಗ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಸರಿಸಮಾನವಾಗಿ ಕಲಿಕೆಯಲ್ಲಿ ಮುಂದುವರೆದು ಸಮಾಜದಲ್ಲಿ ಉತ್ತಮ ನಾಗರಿಕ ರಾಗಲು ಸಹಕಾರಿಯಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಮಾತನಾಡಿ ಬಡ ಹಾಗೂ ಮಧ್ಯಮ ವರ್ಗದ ಸಾಮಾನ್ಯ ಜನರು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗಳಿಗೆ ಸೇರಿಸಲು ಪ್ರತಿ ವರ್ಷವ ಸಹ ಆರ್ಥಿಕವಾಗಿ ಸಮಸ್ಯೆಗೆ ಸಿಲುಕುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಉತ್ತಮಗೊಳಿಸಲು ರಾಜ್ಯದ ಎಲ್ಲಾ ಶಾಲೆಗಳಿಗೆ ಉಚಿತವಾಗಿ ಬಿಸಿಯೂಟ, ಹಾಲು, ಮೊಟ್ಟೆ, ಸಮವಸ್ತ್ರ, ಪಠ್ಯ ಪುಸ್ತಕ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಈ ರೀತಿಯ ಸೌಲಭ್ಯಗಳು ಖಾಸಗಿ ಶಾಲೆಯಲ್ಲಿ ದೊರೆಯುವುದಿಲ್ಲ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಎಲ್ಲಾ ರೀತಿಯ ಚಟುವಟಿಕೆಗಳನ್ನ ಶಾಲೆಗಳಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಉತ್ತಮ ವಾಗಿ ನಡೆಯುತ್ತವೆ. ಪೋಷಕರು ತಮ್ಮ ಮಕ್ಕಳನ್ನು ಅಂಕಗಳಿಗೆ ಸೀಮಿತಗೊಳಿಸ ಬೇಕೆಂದರೆ ಖಾಸಗಿ ಶಾಲೆಗೆ ಸೇರಿಸಬಹುದು. ಆದರೆ ಮಕ್ಕಳು ಜೀವನದಲ್ಲಿ ಪಾಸ್ ಆಗಬೇಕು ಎಂದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಮಾಡಬೇಕು. ಅದು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಸಾಧಿಕ್ ಮಾತನಾಡಿ, ಹಿಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂಗ್ಲೀಷ್ ಭಾಷೆಯನ್ನು ಐದನೇ ತರಗತಿಯಿಂದ ವ್ಯಾಸಂಗ ಮಾಡಬೇಕಾಗಿತ್ತು. ಶೈಕ್ಷಣಿಕ ಬೆಳವಣಿಗೆಯಲ್ಲಿ ನರ್ಸರಿ ತರಗತಿಯಿಂದಲೇ ಇಂಗ್ಲಿಷ್ ಭಾಷೆಯನ್ನು ಕಲಿಯುವುದಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಸರ್ಕಾರ ನೀಡುವ ಎಲ್ಲಾ ಯೋಜನೆಗಳನ್ನು ಮಕ್ಕಳಿಗೆ ಸಿಗಬೇಕು ಎಂದರೆ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು.
ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮವಾಗಿದೆ. ಆಡಳಿತ ಭಾಷೆಯಾಗಿ ಇಂದಿಗೂ ಸಹ ಕನ್ನಡ ಭಾಷೆಯೇ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯು ಸಹ ಹೆಚ್ಚು ಪ್ರಾಧಾನ್ಯತೆ ಯನ್ನು ಹೊಂದಿದ್ದು. ಇಂಗ್ಲಿಷ್ ಭಾಷೆಯ ಜೊತೆಗೂ ಸಹ ಕನ್ನಡ ಭಾಷೆಯು ಮುಖ್ಯವಾಗಿ ಮಕ್ಕಳು ಕಲಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಹೂವನ್ನು ನೀಡಿ ಬರ ಮಾಡಿಕೊಳ್ಳಲಾಯಿತು. ಹಾಗೂ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಠ್ಯಪುಸ್ತಕ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಸದಸ್ಯರಾದ ಜಿ.ಸಿ ಕೃಷ್ಣಮೂರ್ತಿ, ಜಿ ಆರ್ ಶಿವಕುಮಾರ್, ಮುಖ್ಯಾಧಿಕಾರಿ ಮಂಜುಳಾದೇವಿ, ಶಿಕ್ಷಣ ಇಲಾಖೆ ಅಧಿಕಾರಿ ಗಳಾದ ಬಿ ಆರ್ ಸಿ ಮಧುಸೂದನ್, ಇಸಿಓ ನಿಜಗುಣ ಮೂರ್ತಿ, ದೀಪಕ್, ಸಿ ಆರ್ ಪಿ ನಾಗಭೂಷಣ್, ಮುಖ್ಯ ಶಿಕ್ಷಕಿ ಮಂಜುಳಾ ಹಿರಿಯ ಶಿಕ್ಷಕರಾದ ನಟರಾಜು, ಸುಬ್ರಹ್ಮಣ್ಯ, ಈರಮ್ಮ, ಸಹ ಶಿಕ್ಷಕರಾದ ಶೋಭಾ, ನಿತ್ಯಶ್ರೀ, ರಘುನಾಥ್, ಲೀಲಾಕ್ಷಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ್, ಮಧು, ಶಾಲಾ ಸಿಬ್ಬಂದಿ ವರ್ಗ, ಪೋಷಕರು, ವಿದ್ಯಾರ್ಥಿಗಳು ಇತರರು ಹಾಜರಿದ್ದರು.