Pahalgam attack: ಒಂದು ವಾರದ ಹಿಂದೆ ಪಹಲ್ಗಾಮ್ನಲ್ಲಿ ಸ್ಮಾಟ್ ಇನ್ಸ್ಪೆಕ್ಷನ್ ಮಾಡಿದ್ರಂತೆ ಉಗ್ರರು!
Pahalgam terror attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಕಳೆದ ವಾರ ನಡೆದ ಉಗ್ರರ ದಾಳಿ ಬಗ್ಗೆ ಬಗೆದಷ್ಟು ಶಾಕಿಂಗ್ ಸಂಗತಿಗಳು ಹೊರಬೀಳುತ್ತಿವೆ. ಇದೀಗ ದಾಳಿ ನಡೆಯುವ ಒಂದು ವಾರ ಮುನ್ನವೇ ಉಗ್ರರು ಪಹಲ್ಗಾಮ್ನ ಮೂರು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದರು ಎಂಬ ವಿಚಾರ ಬಯಲಾಗಿದೆ.


ಶ್ರೀನಗರ: ಕಳೆದ ವಾರ 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗಿಂತ(Pahalgam Terror Attack) ಒಂದು ವಾರದ ಮೊದಲು, ಉಗ್ರರು ಆ ಪ್ರದೇಶಗಳಿಗೆ ಭೇಟಿ ನೀಡಿ ತಮ್ಮ ಕುಕೃತ್ಯಕ್ಕೆ ಯಾವ ಸ್ಥಳ ಸೂಕ್ತ ಎಂಬುದನ್ನು ಪರಿಶೀಲನೆ ನಡೆಸಿದ್ದರು ಎಂಬುದು ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಕಳೆದ ವಾರ ನಡೆದ ಉಗ್ರರ ದಾಳಿ ಬಗ್ಗೆ ಬಗೆದಷ್ಟು ಶಾಕಿಂಗ್ ಸಂಗತಿಗಳು ಹೊರಬೀಳುತ್ತಿವೆ. ಇದೀಗ ದಾಳಿ ನಡೆಯುವ ಒಂದು ವಾರ ಮುನ್ನವೇ ಅಂದರೆ ಏ.15ರಂದು ಉಗ್ರರು ಪಹಲ್ಗಾಮ್ನ ಮೂರು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದರು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.
ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯ ಸಮಯದಲ್ಲಿ ಭಯೋತ್ಪಾದಕರು ಅಲ್ಟ್ರಾ-ಸ್ಟೇಟ್ ಸಂವಹನ ವ್ಯವಸ್ಥೆಯನ್ನು ಬಳಸುತ್ತಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ವ್ಯವಸ್ಥೆಯು ಭಯೋತ್ಪಾದಕರಿಗೆ ಸಿಮ್ ಕಾರ್ಡ್ ಬಳಸದೆ ಸಂವಹನ ನಡೆಸಲು ಮತ್ತು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕಾಶ್ಮೀರದಲ್ಲಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಮತ್ತು ಇಸ್ರೇಲ್ನಲ್ಲಿ ಹಮಾಸ್ ಉಗ್ರರ ದಾಳಿ ನಡುವೆ ಭಾರೀ ಹೋಲಿಕೆ ಕಂಡುಬಂದಿದೆ. ಇನ್ನು ಇದು ಸಂಪೂರ್ಣವಾಗಿ ಮುಸ್ಲಿಮೇತರರನ್ನು ಅದರಲ್ಲೂ ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿ ನಡೆದಿರುವ ದಾಳಿ ಆಗಿದೆ. ತನಿಖೆ ಕೈಗೆತ್ತಿಕೊಂಡಿರುವ ಎನ್ಐಎ ತಂಡ ಉಗ್ರರಿಗೆ ಬೆಂಬಲ ನೀಡುತ್ತಿರುವ, ಶಸ್ತ್ರಾಸ್ತ್ರ ಪೂರೈಸುತ್ತಿರುವ, ಆಶ್ರಯ ಕೊಡುತ್ತಿರುವ ಸ್ಥಳೀಯರನ್ನು ಹುಡುಕಿ ಹುಡುಕಿ ವಶಕ್ಕೆ ಪಡೆದು ಡ್ರಿಲ್ ಮಾಡುತ್ತಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ
ಏಪ್ರಿಲ್ 22 ರಂದು, ಪಹಲ್ಗಾಮ್ ನಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ಐದರಿಂದ ಆರು ಭಯೋತ್ಪಾದಕರು ಪ್ರವಾಸಿಗರ ಗುಂಪಿನ ಮೇಲೆ ಗುಂಡು ಹಾರಿಸಿದರು. 'ಮಿನಿ ಸ್ವಿಟ್ಜರ್ಲೆಂಡ್' ಎಂದೂ ಕರೆಯಲ್ಪಡುವ ಈ ಹುಲ್ಲುಗಾವಲು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೂಲಕ ಮಾತ್ರ ತಲುಪಬಹುದು. ಪಹಲ್ಗಾಮ್ ಹತ್ಯಾಕಾಂಡವು ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ನಾಗರಿಕ ದಾಳಿಗಳಲ್ಲಿ ಒಂದಾಗಿದೆ.
ಈ ಸುದ್ದಿಯನ್ನೂ ಓದಿ: Pahalgam terror attack: ಪಹಲ್ಗಾಮ್ ದಾಳಿ ಮಾಸ್ಟರ್ ಮೈಂಡ್ ಹಫೀಜ್ಗೆ ಪಾಕ್ ಸರ್ಕಾರದಿಂದ ಬಿಗಿ ಭದ್ರತೆ; ಸೇನೆ, ಡ್ರೋನ್ ಕಣ್ಗಾವಲಲ್ಲಿರುವ ಉಗ್ರ
ಇನ್ನು ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಹೊತ್ತುಕೊಂಡಿದೆ. ಭಯೋತ್ಪಾದಕರು ಸುತ್ತಮುತ್ತಲಿನ ಪೈನ್ ಕಾಡುಗಳಿಂದ ಹೊರಬಂದು ಪಿಕ್ನಿಕ್ ಮಾಡುವ, ಕುದುರೆ ಸವಾರಿ ಮಾಡುವ ಅಥವಾ ಆಹಾರ ಮಳಿಗೆಗಳಲ್ಲಿ ತಿನ್ನುತ್ತಿದ್ದ ಜನರ ಮೇಲೆ ಗುಂಡು ಹಾರಿಸಿದ್ದರು. ಪರಿಣಾಮವಾಗಿ ವಿದೇಶಿ ಪ್ರಜೆಗಳೂ ಸೇರಿ ಬರೋಬ್ಬರಿ 26 ಮಂದಿ ಅಸುನೀಗಿದ್ದರು. ಇನ್ನು ಈ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಪಾಕ್ ವಿರುದ್ಧ ಕಟ್ಟುನಿಟ್ಟಿನ ರಾಜತಾಂತ್ರಿಕ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಉಗ್ರರನ್ನು ಮಟ್ಟ ಹಾಕಲು ಮತ್ತು ಪಾಕ್ಗೆ ತಕ್ಕ ಪಾಠ ಕಲಿಸಲು ಯಾವುದೇ ಕ್ರಮ ಜರುಗಿಸಲು ಮೂರೂ ಸೇನೆಗೆ ಮೋದಿ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ.