Kodi Mutt Swamiji: ಭಾರತ-ಪಾಕ್ ನಡುವೆ ಉಗ್ವಿಗ್ನ ಸ್ಥಿತಿ; ಯುದ್ಧದ ಬಗ್ಗೆ ಕೋಡಿಮಠ ಶ್ರೀ ಹೇಳಿದ್ದೇನು?
Kodi Mutt Swamiji: ಉತ್ತರದ ನಾಡಿನಲ್ಲಿ ಹಗೆಯ ಬೇಗೆ ಹತ್ತೀತು, ಸುತ್ತುವರಿದು ಬರುವಾಗ ಜಗವೆಲ್ಲಾ ಕೂಳಾದೀತು. ಈ ಮಾತನ್ನು ಮೊದಲೇ ನಾನು ಹೇಳಿದ್ದೆ. ಈ ಮಾತನ್ನು ಹೇಳಿದ ಎರಡು ದಿನಗಳಲ್ಲೇ, ಕಾಶ್ಮೀರದಲ್ಲಿ ಸಾಮೂಹಿಕ ಹತ್ಯಾಕಾಂಡವಾಯಿತು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.


ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ಭಯೋತ್ಪಾದಕರ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರು ಹಾಗೂ ಸೇನಾ ಮುಖ್ಯಸ್ಥರ ಜತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು (Kodi Mutt Swamiji) ಭವಿಷ್ಯ ನುಡಿದಿದ್ದಾರೆ. ದೇಶದ ಉತ್ತರದ ನಾಡಿನಲ್ಲಿ ಹಗೆಯ ಬೇಗೆ ಹತ್ತೀತು ಎನ್ನುವ ಮೂಲಕ, ಯುದ್ದದ ಮುನ್ಸೂಚನೆಯನ್ನು ನೀಡಿದ್ದಾರೆ.
ಉತ್ತರದ ನಾಡಿನಲ್ಲಿ ಹಗೆಯ ಬೇಗೆ ಹತ್ತೀತು, ಸುತ್ತುವರಿದು ಬರುವಾಗ ಜಗವೆಲ್ಲಾ ಕೂಳಾದೀತು. ಈ ಮಾತನ್ನು ಮೊದಲೇ ನಾನು ಹೇಳಿದ್ದೆ. ಈ ಮಾತನ್ನು ಹೇಳಿದ ಎರಡು ದಿನಗಳಲ್ಲೇ, ಕಾಶ್ಮೀರದಲ್ಲಿ ಸಾಮೂಹಿಕ ಹತ್ಯಾಕಾಂಡವಾಯಿತು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.
ಈ ಸಮಸ್ಯೆ ಬರೀ ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆಲ್ಲಾ ಹೆಚ್ಚಾಗಲಿದೆ. ಉತ್ತರದ ಭಾಗದಲ್ಲಿ ಅಂದರೆ ಅದು ಕಾಶ್ಮೀರ, ಜಗವೆಲ್ಲಾ ಕೂಳಾದೀತು ಅದು ವಿಶ್ವದೆಲ್ಲಡೆ ಹರಡಲಿದೆ. ಇದು ದೊಡ್ಡ ಮಟ್ಟದಲ್ಲಿ ಆಗುವ ಸಂಭವವಿದೆ. ಮತಾಂಧ ಕಲಹ ಹೆಚ್ಚುತ್ತೆ, ಮರಣ ಮೃದಂಗ ಹೆಚ್ಚುತ್ತೆ. ಇದರಲ್ಲಿ ಬಹಳಷ್ಟು ಸಾವುನೋವುಗಳಾಗಲಿವೆ. ಆಳುವ ಅರಸರು ಇದನ್ನು ಆಲೋಚಿಸಬೇಕು. ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಯುದ್ಧ ಬೇಕಾ ಬೇಡವಾ ಎನ್ನುವುದನ್ನು ಆಲೋಚಿಸಬೇಕು. ಸನ್ಯಾಸಿಗಳಾದ ನಾವು, ಜಪತಪದ ಮೂಲಕ ನಮ್ಮ ನಾಡಿಗೆ ಒಳಿತಾಗಲಿ ಎಂದಷ್ಟೇ ಚಿಂತಿಸಬೇಕು ಎಂದು ಶ್ರೀಗಳು ಹೇಳಿದ್ದಾರೆ.
ಯುದ್ಧದ ಭೀತಿ ಜಗತ್ತಿನಾದ್ಯಂತ ಹರಡಲಿದೆ, ಅಸಂತೋಶ, ದುಃಖಗಳು ಹೆಚ್ಚಾಗಲಿವೆ. ಬೆಂಕಿಯ ಜ್ವಾಲೆ ಆವರಿಸಲಿದೆ, ಸುನಾಮಿ ಬಡಿಯಲಿದೆ, ರಾಜಕೀಯವಾಗಿ ನಾವು ಅಭಿಪ್ರಾಯ ವ್ಯಕ್ತ ಪಡಿಸುವುದಿಲ್ಲ. ರಾಷ್ಟ್ರ ಪ್ರೇಮಕ್ಕಾಗಿ ಎಲ್ಲರೂ ಒಂದಾಗಬೇಕಿದೆ, ಇದು ಈ ಕ್ಷಣದ ಜರೂರತ್ ಎಂದು ಕೋಡಿಶ್ರೀಗಳು ಹೇಳಿದ್ದಾರೆ.
ಜಲ, ವಾಯು, ಅಗ್ನಿ ಮತ್ತು ಮೇಘ ಸುನಾಮಿಗಳು ಈ ಸಂವತ್ಸರದಲ್ಲಿ ಸಂಭವಿಸಲಿದೆ. ಇದು ಜಗತ್ತಿಗೆ ಅನ್ವಯವಾಗುವಂತದ್ದು, ಭಾರತಕ್ಕೆ ಮಾತ್ರ ಅಲ್ಲ. ಹಿಮಾಲಯ ಪರ್ವತ ನಡುಗುವಂತಹ ಲಕ್ಷಣಗಳಿವೆ, ಗೌರೀಶಂಕರ ಶಿಖರ ಶಿವಶಿವ ಎಂದೀತು. ದೊಡ್ಡದೊಡ್ಡ ಊರುಗಳಲ್ಲಿ ಕಟ್ಟಡ ನಾಶವಾಗುವಂತಹ ಲಕ್ಷಣಗಳಿವೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | CM Siddaramaiah: ಜಾತಿ ಗಣತಿ ಜೊತೆಗೆ ಸಾಮಾಜಿಕ, ಆರ್ಥಿಕ ಗಣತಿ ನಡೆಸಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಆಗ್ರಹ
ಈ ಸಂವತ್ಸರಲ್ಲಿ ಜಗತ್ತಿನ ಮೂರ್ನಾಲ್ಕು ಅರಸರು ಅಸುನೀಗುವ ಸಾಧ್ಯತೆಗಳಿವೆ. ಭೂಮಿ ಹತ್ತಿ ಉರಿಯಲಿದೆ, ರೋಗ ಜಗತ್ತನ್ನು ಆವರಿಸಿಕೊಳ್ಳಲಿದೆ. ಆ ರೋಗ ಐದು ವರ್ಷ ಕಾಟ ಕೊಡಲಿದೆ. ಕರ್ನಾಟಕ ಸುತ್ತಮುತ್ತಲಿನ ಭಾಗಕ್ಕೆ ಏನೂ ತೊಂದರೆಯಿಲ್ಲ, ಸಕಾಲದ ಮಳೆಗಳು ಅತಿವೃಷ್ಟಿಯಾಗಿ ಸುರಿಯಲಿದೆ ಎಂದು ತಿಳಿಸಿದ್ದಾರೆ.