Jr.NTR: ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್ಗೆ ಜೂ.ಎನ್ಟಿಆರ್ ನಾಯಕ
ದಾದಾ ಸಾಹೇಬ್ ಫಾಲ್ಕೆ ಅವರ ಬಯೋಪಿಕ್ ಅನ್ನು ನಿರ್ದೇಶಕ ರಾಜ್ಮೌಳಿ ನಿರ್ಮಾಣ ಮಾಡಲಿದ್ದಾರೆ. ನಟ ಜೂನಿಯರ್ ಎನ್ಟಿಆರ್ ಅವರಿಗೆ ಈ ಬಯೋಪಿಕ್ನಲ್ಲಿ ಅಭಿನಯಿಸಲು ಅವಕಾಶ ನೀಡಲಾಗಿದೆ. ʼಆರ್ಆರ್ಆರ್ʼ ಸಿನಿಮಾ ಬಳಿಕ ರಾಜಮೌಳಿ ಮತ್ತು ನಟ ಜೂನಿಯರ್ ಎನ್ಟಿಆರ್ ಜತೆಯಾಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

Jr. NTR.

ನವದೆಹಲಿ: ನಟ ಜೂನಿಯರ್ ಎನ್ಟಿಆರ್ (Jr. NTR) ಅವರಿಗೆ ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಸಿನಿಮಾ ಆಫರ್ಗಳು ಸಿಗುತ್ತಲೇ ಇವೆ. ʼವಾರ್ 2ʼ, ʼದೇವರ 2ʼ, ಪ್ರಶಾಂತ್ ನೀಲ್ ಜತೆಗಿನ ಚಿತ್ರದಲ್ಲಿ ಅಬಿನಯಿಸುತ್ತಿದ್ದಾರೆ. ಈ ನಡುವೆ ʼಬಾಹುಬಲಿʼ ಸಿನಿಮಾದ ಖ್ಯಾತ ನಿರ್ದೇಶಕ ಎಸ್ . ಎಸ್. ರಾಜಮೌಳಿ (SS Rajamouli) ಜತೆಗೆ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ದಾದಾ ಸಾಹೇಬ್ ಫಾಲ್ಕೆ ಅವರ ಬಯೋಪಿಕ್ ಅನ್ನು ನಿರ್ದೇಶಕ ರಾಜಮೌಳಿ ನಿರ್ಮಾಣ ಮಾಡಲಿದ್ದಾರೆ. ನಟ ಜೂನಿಯರ್ ಎನ್ಟಿಆರ್ ಅವರಿಗೆ ಈ ಬಯೋಪಿಕ್ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಲಾಗಿದೆ. ʼಆರ್ಆರ್ಆರ್ʼ ಸಿನಿಮಾ ಬಳಿಕ ರಾಜಮೌಳಿ ಜತೆ ನಟ ಜೂನಿಯರ್ ಎನ್ಟಿಆರ್ ಕೈಜೋಡಿಸಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದ ದಾದಾ ಸಾಹೇಬ್ ಫಾಲ್ಕೆ ಅವರನ್ನು ಇಂದಿಗೂ ಹಲವರು ನೆನಪಿಸಿಕೊಳ್ಳುತ್ತಾರೆ. ಸರಿಯಾದ ತಂತ್ರಜ್ಞಾನ ವ್ಯವಸ್ಥೆ ಇಲ್ಲದ ಕಾಲಘಟ್ಟದಲ್ಲಿಯೂ ಜನರಿಗೆ ಮನೋರಂಜನೆ ನೀಡುವ ಸಲುವಾಗಿ ವಿಭಿನ್ನ ಆಯಾಮದ ಸಿನಿಮಾ ನೀಡಿದ್ದ ಖ್ಯಾತಿ ದಾದಾ ಸಾಹೇಬ್ ಫಾಲ್ಕೆ ಅವರಿಗಿದೆ. ಈ ನಿಟ್ಟಿನಲ್ಲಿ ಅವರ ಆತ್ಮಕಥೆಯನ್ನೇ ಸಿನಿಮಾ ಮಾಡಲು ರಾಜಮೌಳಿ ಮತ್ತು ಟೀಂ ಮುಂದಾಗಿದೆ.
ದಾದಾ ಸಾಹೇಬ್ ಫಾಲ್ಕೆ ಅವರು 1870ರ ಕಾಲಘಟ್ಟದವರು. ಮೊದಲಿನಿಂದಲೂ ಫೋಟೋಗ್ರಫಿ ಬಗ್ಗೆ ವಿಪರೀತ ಆಸಕ್ತಿ ಇದ್ದ ದಾದಾ ಸಾಹೇಬ್ ಫಾಲ್ಕೆ ಅವರು 1903ರಲ್ಲಿ ಪುರಾತತ್ವ ಇಲಾಖೆಯಲ್ಲಿ ಫೋಟೋಗ್ರಾಫರ್ ಹುದ್ದೆಗೆ ಸೇರಿ ಕೊಂಡರು. ʼಲೈಫ್ ಆಫ್ ಕ್ರಿಸ್ಟ್ʼ ಚಿತ್ರ ನೋಡಿ ತಾವು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದರು. 1913ರಲ್ಲಿ ‘ರಾಜಾ ಹರೀಶ್ಚಂದ್ರ’ ಸಿನಿಮಾ ನಿರ್ದೇಶಿಸಿದರು. ಈ ಸಿನಿಮಾವು ಭಾರತದಲ್ಲಿ ಪ್ರದರ್ಶನಗೊಂಡ ಮೊಟ್ಟ ಮೊದಲ ಪೂರ್ಣಪ್ರಮಾಣದ ಸಿನಿಮಾ ಎಂಬ ಖ್ಯಾತಿ ಪಡೆದಿದೆ. ವೃತ್ತಿ ಜೀವನದಲ್ಲಿ ಸುಮಾರು 95 ಸಿನಿಮಾಗಳನ್ನು ತಯಾರಿಸಿದ್ದ ಅವರು ತಾವು ಕಷ್ಟದಲ್ಲಿದ್ದರೂ ಸಿನಿಮಾ ಕ್ಷೇತ್ರ ಬೆಳೆಯಬೇಕೆಂದು ಸಾಕಷ್ಟು ಸೇವೆ ಸಲ್ಲಿಸಿದರು. ಹೀಗಾಗಿ ಅವರ ಸೇವೆಯ ಸ್ಮರಣಾರ್ಥ ಅವರ ಹೆಸರಲ್ಲಿ ಕೇಂದ್ರ ಸರ್ಕಾರ ಪ್ರಶಸ್ತಿ ಕೂಡ ನೀಡುತ್ತಿದೆ. ಇದು ಅವರಿಗೆ ಸಂದ ಗೌರವ ಎನ್ನಬಹುದು. ಇದೀಗ ಈ ಎಲ್ಲ ವಿಚಾರಗಳು ಸಿನಿಮಾ ರೂಪದಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆ.
ಇದನ್ನು ಓದಿ: Jr NTR: ಫ್ಯಾನ್ಸ್ ಮೇಲೆ ಜೂನಿಯರ್ ಎನ್ಟಿಆರ್ ಗರಂ ಆಗಿದ್ದೇಕೆ? ಈ ವಿಡಿಯೊ ನೋಡಿ
ದಾದಾ ಸಾಹೇಬ್ ಫಾಲ್ಕೆ ಕುರಿತಾದ ಸಿನಿಮಾ ಮಾಡುವ ಬಗ್ಗೆ ಈಗಾಗಲೇ ನಿರ್ದೇಶಕ ರಾಜಮೌಳಿ ಅವರು ಜೂನಿಯರ್ ಎನ್ಟಿಆರ್ ಅವರನ್ನು ಭೇಟಿ ಮಾಡಿ ಮಾತುಕಥೆ ಮುಗಿಸಿದ್ದಾರೆ. ಈ ಸಿನಿಮಾ ತೆರೆಮೇಲೆ ತರುವುದು ಒಂದು ಸಾಹಸವಿದ್ದಂತೆ. ಆ ಕಾಲದ ಪ್ರತಿ ವಿಚಾರವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಬಳಿಕ ಮಾತ್ರವೇ ಈ ಸಿನಿಮಾ ಮಾಡಬೇಕಾದ ಕಾರಣ ರಾಜಮೌಳಿ ಮತ್ತು ನಟ ಜೂ. ಎನ್ಟಿಆರ್ ಅವರಿಗೂ ಇದೊಂದು ಹೊಸ ಚಾಲೆಂಜ್ ಆಗುವ ಸಾಧ್ಯತೆ ಇದೆ.
ನಟ ಜೂನಿಯರ್ ಎನ್ಟಿಆರ್ ಎಂದಾಗ ಮಾಸ್ ಲುಕ್ ಮತ್ತು ಫೈಟ್ಗಳೇ ಹೆಚ್ಚಾಗಿ ನೆನಪಾಗುತ್ತೆ. ಅಂತಹ ಮಾಸ್ ಸ್ಟಾರ್ ದಾದಾ ಸಾಹೇಬ್ ಪಾತ್ರದಲ್ಲಿ ಮಿಂಚಲಿದ್ದಾರೆ. ನಿರ್ದೇಶಕ ರಾಜಮೌಳಿ ಅನೇಕ ವಿಭಿನ್ನ ಕಥೆಗಳಿಗೆ ಜೀವ ತುಂಬುವ ಚಾಕಚಕ್ಯತೆ ಹೊಂದಿದ್ದ ಕಾರಣ ಈ ಸಿನಿಮಾ ಕೂಡ ಅಂದುಕೊಂಡದ್ದಕ್ಕಿಂತ ಬಹಳ ವಿಭಿನ್ನವಾಗಿ ತೆರೆ ಕಾಣಬಹುದು ಎಂಬುದು ಪ್ರೇಕ್ಷಕರ ನಿರೀಕ್ಷೆ.