ʻನಾವು ಒಗ್ಗಟ್ಟಿನಿಂದ ನಿಲ್ಲಬೇಕುʼ:ಭಾರತೀಯ ಸೇನೆಗೆ ವಿಶೇಷ ಗೌರವ ಸಲ್ಲಿಸಿದ ವಿರಾಟ್ ಕೊಹ್ಲಿ!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತಾತ್ಕಾಲಿಕ ಸ್ಥಗಿತಗೊಳಿಸಿದ ತಕ್ಷಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಭಾರತೀಯ ಸೇನೆಗೆ ಬೆಂಬಲವನ್ನು ವ್ಯಕ್ತಪಡಿಸುವ ಮೂಲಕ ಅವರನ್ನು ಮುಕ್ತಕಠದಿಂದ ಗುಣಗಾನ ಮಾಡಿದ್ದಾರೆ.

ಭಾರತೀಯ ಸೇನೆಗೆ ವಿರಾಟ್ ಕೊಹ್ಲಿ ಮೆಚ್ಚುಗೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ (IND vs PAK) ನಡುವೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ನಡುವೆ ಭಾರತೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ(Virat Kohli) ಭಾರತೀಯ ಸಶಸ್ತ್ರ ಪಡೆಗಳಿಗೆ ಬೆಂಬಲದ ಬಲವಾದ ಸಂದೇಶವನ್ನು ನೀಡಿದ್ದಾರೆ. ಕ್ಷಿಪಣಿ ದಾಳಿಗಳು, ವಾಯುದಾಳಿ ಎಚ್ಚರಿಕೆಗಳು ಮತ್ತು ಗಡಿಯಲ್ಲಿ ಹೆಚ್ಚಿದ ಮಿಲಿಟರಿ ಚಟುವಟಿಕೆಯಿಂದಾಗಿ ಭದ್ರತಾ ಕಳವಳಗಳು ಹೆಚ್ಚಿವೆ. ಇದು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2025) ಮೇಲೂ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಶುಕ್ರವಾರ ಟೂರ್ನಿಯ ಇನ್ನುಳಿದ ಭಾಗವನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ವಿರಾಟ್ ಕೊಹ್ಲಿ ಭಾರತೀಯ ಸೇನೆಯನ್ನು ಬೆಂಬಲಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. "ಈ ಕಠಿಣ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುತ್ತಿರುವ ನಮ್ಮ ಸಶಸ್ತ್ರ ಪಡೆಗಳೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ನಮ್ಮ ವೀರರ ಅಚಲ ಶೌರ್ಯ ಮತ್ತು ಅವರು ಮತ್ತು ಅವರ ಕುಟುಂಬಗಳು ನಮ್ಮ ಮಹಾನ್ ರಾಷ್ಟ್ರಕ್ಕಾಗಿ ಮಾಡಿದ ತ್ಯಾಗಗಳಿಗೆ ನಾವು ಎಂದೆಂದಿಗೂ ಋಣಿಯಾಗಿರುತ್ತೇವೆ. ಜೈ ಹಿಂದ್," ಎಂದು ವಿರಾಟ್ ಕೊಹ್ಲಿ ಭಾರತೀಯ ಸೇನೆಗೆ ಗೌರವ ಸಲ್ಲಿಸಿದ್ದಾರೆ.
IPL 2025: ಫಾರ್ಮ್ ಕಂಡುಕೊಳ್ಳಲು ರಿಷಭ್ ಪಂತ್ಗೆ ಮಹತ್ವದ ಸಲಹೆ ನೀಡಿದ ನವಜೋತ್ ಸಿಧು!
2025ರ ಐಪಿಎಲ್ ತಾತ್ಕಾಲಿಕವಾಗಿ ರದ್ದು
ಪಾಕಿಸ್ತಾನವು ಜಮ್ಮು, ಪಠಾಣ್ಕೋಟ್, ಪಂಜಾಬ್ ಮತ್ತು ರಾಜಸ್ಥಾನದ ಹಲವು ನಗರಗಳ ಮೇಲೆ ದಾಳಿ ಮಾಡಿತು. ಇದಾದ ನಂತರ, ವಿರಾಟ್ ಕೊಹ್ಲಿ ಈ ಪೋಸ್ಟ್ ಹಾಕಿದ್ದಾರೆ. ಆದಾಗ್ಯೂ, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ದಾಳಿಯನ್ನು ಸಂಪೂರ್ಣವಾಗಿ ವಿಫಲಗೊಳಿಸಿದವು. ಭದ್ರತಾ ಕಾರಣಗಳಿಂದಾಗಿ 2025ರ ಐಪಿಎಲ್ ಟೂರ್ನಿಯನ್ನು ಒಂದು ವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇದು ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಈ ಕಠಿಣ ಸಮಯದಲ್ಲಿ ವಿರಾಟ್ ಕೊಹ್ಲಿ ಭಾರತೀಯ ಸೇನೆಗೆ ಬೆಂಬಲ ನೀಡಿದ್ದಾರೆ. ಅವರು ಸೇನಾ ಸೈನಿಕರ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಡೆಲ್ಲಿ-ಪಂಜಾಬ್ ಪಂದ್ಯ ರದ್ದಾಗಿತ್ತು
ಈ ದಾಳಿಗಳಿಗೆ ಭಾರತೀಯ ಸೇನೆಯು ಸೂಕ್ತ ಪ್ರತ್ಯುತ್ತರ ನೀಡಿದೆ. ಇದಕ್ಕೂ ಮೊದಲು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆಟಗಾರರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಏಕೆಂದರೆ ಜಮ್ಮು ಮತ್ತು ಪಠಾಣ್ಕೋಟ್ನಲ್ಲಿ ವಾಯುದಾಳಿ ಎಚ್ಚರಿಕೆ ನೀಡಲಾಗಿತ್ತು.
ಬಿಸಿಸಿಐ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಇನ್ನೂ ಹಲವು ಲೀಗ್ ಪಂದ್ಯಗಳು ಮತ್ತು ನಾಕೌಟ್ ಪಂದ್ಯಗಳು ಬಾಕಿ ಉಳಿದಿವೆ. ಐಪಿಎಲ್ ಟೂರ್ನಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿರುವುದರಿಂದ, ಇನ್ನುಳಿದ ಪಂದ್ಯಗಳನ್ನು ಮರು ನಿಗದಿಪಡಿಸಲಾಗುತ್ತದೆಯೇ ಅಥವಾ ಸುರಕ್ಷಿತ ಸ್ಥಳದಲ್ಲಿ ಆಡಲಾಗುತ್ತದೆಯೇ ಎಂದು ಕಾದು ನೋಡಬೇಕಾಗುತ್ತದೆ. ಪರಿಸ್ಥಿತಿ ಸುಧಾರಿಸಿದಾಗ ಮಾತ್ರ ಇದೆಲ್ಲವೂ ಸುಸೂತ್ರವಾಗಿ ನಡೆಯಬಹುದು.
With every passing moment, with every decision taken I feel extremely proud of our Indian Army, Indian Airforce & Indian Navy. Our warriors are standing tall for our nation’s pride. It’s important for every Indian to be responsible and refrain from spreading or believing any fake…
— Rohit Sharma (@ImRo45) May 9, 2025
ಭಾರತೀಯ ಸೇನೆಯನ್ನು ಶ್ಲಾಘಿಸಿದ ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ ಜೊತೆಗೆ ರೋಹಿತ್ ಶರ್ಮಾ ಕೂಡ ಭಾರತೀಯ ಸೇನೆಯನ್ನು ಹೊಗಳಿದ್ದಾರೆ. ಜನರು ವದಂತಿಗಳಿಗೆ ಗಮನ ಕೊಡಬೇಡಿ ಮತ್ತು ದೇಶವನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.
"ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಎದೆಗಾರಿಕೆ ಮತ್ತು ಬದ್ಧತೆಗೆ ನಾನು ನಮಸ್ಕರಿಸುತ್ತೇನೆ. ನಮ್ಮ ದೇಶ ಕಠಿಣ ಸಮಯವನ್ನು ಎದುರಿಸಿದ್ದ ಸಂದರ್ಭಗಳಲ್ಲಿ ಅವರೆಲ್ಲರೂ ನಮ್ಮ ಪರವಾಗಿ ನಿಲ್ಲುವುದನ್ನು ಮುಂದುವರಿಸುತ್ತಾರೆ. ಶಾಂತವಾಗಿ ಉಳಿಯುವ ಮೂಲಕ ಮತ್ತು ಎಲ್ಲಾ ಸುರಕ್ಷತಾ ಸಲಹೆಗಳನ್ನು ಅನುಸರಿಸುವ ಮೂಲಕ ನಾವು ಅವರನ್ನು ಬೆಂಬಲಿಸೋಣ," ಎಂದು ರೋಹಿತ್ ಶರ್ಮಾ ಬರೆದಿದ್ದಾರೆ.