ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಪಹಲ್ಗಾಮ್‌ ದಾಳಿಯ ಉಗ್ರರು ಇನ್ನೂ ಅಲ್ಲೇ ಇದ್ದಾರೆ; ಸ್ಥಳೀಯರಿಂದ ಆಹಾರ ಸಪ್ಲೈ?

National Investigation Agency: ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಏ. 22ರಂದು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದ 4 ಉಗ್ರರು ಈಗಲೂ ಅದೇ ಪ್ರದೇಶದಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ. ಅಗತ್ಯ ವಸ್ತುಗಳನ್ನು ಒಯ್ದು ಅವರು ಸ್ಥಳೀಯ ದಟ್ಟ ಕಾಡಿನಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ.

ಪಹಲ್ಗಾಮ್‌ ದಾಳಿಯ ಉಗ್ರರು ಇನ್ನೂ ಅಲ್ಲೇ ಇದ್ದಾರೆ

ಬೈಸರನ್ ಕಣಿವೆ.

Profile Ramesh B May 1, 2025 8:26 PM

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಏ. 22ರಂದು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದ 4 ಉಗ್ರರು ಈಗಲೂ ಅದೇ ಪ್ರದೇಶದಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (National Investigation Agency) ಮೂಲಗಳು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ (Pahalgam Terrorists). ಅಗತ್ಯ ವಸ್ತುಗಳನ್ನು ಒಯ್ದು ಅವರು ಸ್ಥಳೀಯ ದಟ್ಟ ಕಾಡಿನಲ್ಲಿ ಅಡಗಿಕೊಂಡಿರಬಹುದು (Pahalgam Attack). ಇದೇ ಕಾರಣಕ್ಕೆ ಇನ್ನೂ ಅವರು ಪತ್ತೆಯಾಗಿಲ್ಲ. ಜತೆಗೆ ಸ್ಥಳೀಯರು ಉಗ್ರರಿಗೆ ಆಹಾರ ಒದಗಿಸುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 40 ಸೈನಿಕರು ಹುತಾತ್ಮರಾದ 2019ರ ದಾಳಿಯ ನಂತರ ಪಹಲ್ಗಾಮ್‌ನಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯ ತನಿಖೆಯನ್ನು ಈಗಾಗಲೇ ಭಯೋತ್ಪಾದನಾ ವಿರೋಧಿ ಸಂಸ್ಥೆ ಎನ್ಐಎ ವಹಿಸಿಕೊಂಡಿದೆ.

ಪಹಲ್ಗಾಮ್ ಬಳಿಯ ಪ್ರಸಿದ್ಧ ಹುಲ್ಲುಗಾವಲು ಮತ್ತು ಪ್ರವಾಸಿ ತಾಣವಾದ ಬೈಸರನ್ ಕಣಿವೆಯಲ್ಲಿ ದಾಳಿ ನಡೆಯುವುದಕ್ಕೆ ಕನಿಷ್ಠ 48 ಗಂಟೆಗಳ ಮೊದಲು ಭಯೋತ್ಪಾದಕರು ಇದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿಯ ನಂತರ ನಡೆದ ವಿಚಾರಣೆ ವೇಳೆ ಓವರ್ ಗ್ರೌಂಡ್ ವರ್ಕರ್ಸ್ ಅಥವಾ ಭಯೋತ್ಪಾದಕರ ಪರ ಅನುಕಂಪ ಹೊಂದಿರುವ 4 ಮಂದಿಯನ್ನು ಅರು ಕಣಿವೆ ಮತ್ತು ಬೇತಾಬ್ ಕಣಿವೆಗಳಿಂದ ವಶಕ್ಕೆ ಪಡೆಯಲಾಗಿದೆ.



ಈ ಸುದ್ದಿಯನ್ನೂ ಓದಿ: BSF Soldiers: 7 ದಿನ... 7ಮೀಟಿಂಗ್‌...ನೋ ರೆಸ್ಪಾನ್ಸ್‌! ಪಾಕ್‌ ವಶದಲ್ಲಿರುವ BSF ಯೋಧನ ಗತಿಯೇನು?

ಭಯೋತ್ಪಾದಕರು ಸುಧಾರಿತ ಸಂವಹನ ವ್ಯವಸ್ಥೆಯನ್ನು ಹೊಂದಿದ್ದರು ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ರಕ್ಷಣಾ ತಜ್ಞ ಮೇಜರ್ ಜನರಲ್ ಯಶ್ ಮೋರ್ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ಎನ್‌ಡಿಟಿವಿ ತಿಳಿಸಿದೆ.

ಸಂವಹನಕ್ಕೆ ಉಗ್ರರು ಬಳಸುವ ಉಪಕರಣಗಳಿಗೆ ಸಿಮ್ ಕಾರ್ಡ್‌ಗಳ ಅಗತ್ಯವಿಲ್ಲ. ಇದರಿಂದಾಗಿ ಅವರ ಜಾಡು ಹಿಡಿಯುವುದೇ ಬಹುದೊಡ್ಡ ಸವಾಲಾಗಿದೆ. ಏ. 22ರ ಮಧ್ಯಾಹ್ನ 1.15ಕ್ಕೆ ದಾಳಿ ನಡೆಸುವ ಮುನ್ನ ಭಯೋತ್ಪಾದಕರು 3 ಉಪಗ್ರಹ ಆಧಾರಿತ ಫೋನ್‌ ಬಳಸಿದ್ದಾರೆ ಎಂದು ವರದಿ ವಿವರಿಸಿದೆ. ಮೂವರು ಭಯೋತ್ಪಾದಕರು ಬೈಸರನ್ ಕಣಿವೆಯಲ್ಲಿ ಓಡಾಡಿ ಪ್ರವಾಸಿಗರ ಮೇಲೆ ಗುಂಡು ಹಾರಿಸಲು ಹಾರಿಸಿದರೆ ನಾಲ್ಕನೆಯವನು ಅಡಗುತಾಣದಲ್ಲಿ ನಿಂತು ಪರಿಸ್ಥಿತಿ ಅವಲೋಕಿಸುತ್ತಿದ್ದ, ಅಗತ್ಯವಿದ್ದರೆ ತಮ್ಮವರ ನೆರವಿಗೆ ಧಾವಿಸಲು ಸಿದ್ಧನಾಗಿ ನಿಂತಿದ್ದ ಎನ್ನಲಾಗಿದೆ.

ದಟ್ಟ ಕಾಡಿನಲ್ಲಿ ಇನ್ನೂ ಅನೇಕ ಭಯೋತ್ಪಾದಕರು ಅಡಗಿರಬಹುದು ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕರು ಮುಸ್ಲಿಮೇತರ ಪುರುಷರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

3 ಸ್ಥಳಗಳಲ್ಲಿ ಓಡಾಡಿದ್ದ ಉಗ್ರರು

ಉಗ್ರರು ಬೈಸರನ್ ಕಣಿವೆಯನ್ನು ಹೊರತುಪಡಿಸಿ ಇತರ 3 ಸ್ಥಳಗಳನ್ನು ದಾಳಿಗೆ ಪರಿಗಣಿಸಿದ್ದರು ಎನ್ನುವ ವಿಚಾರ ಎನ್​ಐಎ ತನಿಖೆ ವೇಳೆ ಬಯಲಾಗಿದೆ. ಭಯೋತ್ಪಾದಕರು ಆರಂಭದಲ್ಲಿ ಅರು ಕಣಿವೆ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಮತ್ತು ಬೇತಾಬ್ ಕಣಿವೆ ಸೇರಿದಂತೆ ಇತರ ಮೂರು ಸ್ಥಳಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದರು. ಆ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಇದ್ದುದರಿಂದ ಅಂತಿಮವಾಗಿ ಬೈಸರ್‌ನಲ್ಲಿ ದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.