Vishwavani Editorial: ಬೋಧನಾ ಗುಣಮಟ್ಟ ಹೆಚ್ಚಳವಾಗಲಿ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 144 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಅಲ್ಲದೆ, ಮೊದಲ ಹತ್ತು ಸ್ಥಾನಗಳನ್ನು ದಕ್ಷಿಣ ಕರ್ನಾಟಕದ ಜಿಗಳು ಪಡೆದರೆ, ಕೊನೆಯ ಏಳು ಸ್ಥಾನಗಳಲ್ಲಿ ಉತ್ತರ ಕರ್ನಾಟಕದ ಜಿಗಳಿವೆ. ಕಳೆದ ವರ್ಷವೂ ಹೆಚ್ಚು-ಕಡಿಮೆ ಇದೆ ಪರಿಸ್ಥಿತಿ ಇತ್ತು. ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯು ಹಲ ವಾರು ಕ್ರಮಗಳನ್ನು ಕೈಗೊಂಡರೂ ಯಾವುದೇ ರೀತಿಯ ಬದಲಾವಣೆ ಸಾಧ್ಯವಾಗುತ್ತಿಲ್ಲ


ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 144 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಅಲ್ಲದೆ, ಮೊದಲ ಹತ್ತು ಸ್ಥಾನಗಳನ್ನು ದಕ್ಷಿಣ ಕರ್ನಾಟಕದ ಜಿಲ್ಲೆಗಳು ಪಡೆದರೆ, ಕೊನೆಯ ಏಳು ಸ್ಥಾನಗಳಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿವೆ. ಕಳೆದ ವರ್ಷವೂ ಹೆಚ್ಚು-ಕಡಿಮೆ ಇದೆ ಪರಿಸ್ಥಿತಿ ಇತ್ತು. ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯು ಹಲವಾರು ಕ್ರಮಗಳನ್ನು ಕೈಗೊಂಡರೂ ಯಾವುದೇ ರೀತಿಯ ಬದಲಾವಣೆ ಸಾಧ್ಯವಾಗುತ್ತಿಲ್ಲ. ಇದೇ ರೀತಿಯ ಫಲಿತಾಂಶ ಮುಂದಿನ ವರ್ಷದಿಂದಲೂ ಮುಂದುವರಿದರೆ ವಿದ್ಯಾರ್ಥಿಗಳ ವೃತ್ತಿ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಬೋಧನಾ ಗುಣಮಟ್ಟವನ್ನು ಉತ್ತಮಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ನಿರಂತರ ನಿಗಾ ವ್ಯವಸ್ಥೆ ರೂಪಿಸಬೇಕಿದೆ. ಇಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಹಾಗಾಗಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕ ಮಾಡಿಕೊಳ್ಳ ಬೇಕಿದೆ. ಈಗಾಗಲೇ ನೇಮಕವಾಗಿರುವ ಶಿಕ್ಷಕರಿಗೆ ಅಗತ್ಯವಿದ್ದಲ್ಲಿ ಅವರಿಗೆ ವಿಶೇಷ ತರಬೇತಿ ನೀಡಬೇಕು.
ಇದನ್ನೂ ಓದಿ: Vishwavani Editorial: ಜನರು ಸೂಕ್ಷ್ಮಮತಿಗಳು, ಮರೆಯದಿರಿ!
ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಪೋಷಿಸಬೇಕಿದೆ. ಕಲಿಕೆ ಮತ್ತು ಗ್ರಹಿಕೆಯಲ್ಲಿ ನಿರೀಕ್ಷಿತ ಮಟ್ಟಕ್ಕೆ ಏರದ ಮಕ್ಕಳನ್ನು ಮತ್ತೊಂದು ಶೈಕ್ಷಣಿಕ ವರ್ಷಕ್ಕೆ ಅದೇ ತರಗತಿಯಲ್ಲಿ ಉಳಿಸುವ ನಮ್ಮ ಹಿಂದಿನ ವ್ಯವಸ್ಥೆ ಪುನಃ ಜಾರಿಯಾಗಬೇಕು. ಒಂದರಿಂದ ಒಂಬತ್ತನೇ ತರಗತಿಯವರೆಗೆ ಕನಿಷ್ಠ ಅಂಕ ಪಡೆಯದ ವಿದ್ಯಾರ್ಥಿಗಳನ್ನೂ ಮುಂದಿನ ತರಗತಿಗೆ ಉತ್ತೀರ್ಣವಾಗಿಸುವ ಪದ್ಧತಿ ಬದಲಾಗಬೇಕಿದೆ. ಒಟ್ಟಾರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸುವ ಅಗತ್ಯವಿದೆ.
ಈ ಕುರಿತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ತಜ್ಞರು ಈ ಕುರಿತು ಚಿಂತಿಸುವ ಅಗತ್ಯ ವಿದೆ. ರಾಜ್ಯ ಸರಕಾರ ವಿಶೇಷ ಕಾಳಜಿ ವಹಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ. ಆ ಮೂಲಕ ಮುಂಬರುವ ವರ್ಷಗಳಲ್ಲಿ ಫಲಿತಾಂಶ ಪ್ರಗತಿ ಕಾಣಬೇಕಿದೆ.